Wednesday, July 15, 2015

ಕಬ್ಬಿನಲ್ಲಿ ರೈತನಿಗೆ ಸಿಹಿಯಿಲ್ಲ. ಕಹಿಯೇ ಎಲ್ಲ...

ಅವತ್ತೂ ಯಾವ ಸುದ್ದಿನೂ ಬರಲಿಲ್ಲ. ಸರ್ಕಾರವೂ ನೋಡಲಿಲ್ಲ. ಸಕ್ಕರೆ ಕಾರ್ಖಾನೆಯಂತೂ ರೈತರ ಪಾಲಿಗೆ ಇದ್ದೂ ಸತ್ತು ಹೋಗಿತ್ತು. ಬೆಳೆದು ನಿಂತ ಕಬ್ಬು ಒಲೆಗೆ ಉರವಲಾಗಿತ್ತು... ________________________________________________ ಅದು 1994ರಲ್ಲಿ ನಡೆದಿದ್ದು. ನಾನಾಗ ನಾಲ್ಕನೇ ತರಗತಿಯಲ್ಲಿದ್ದೆ. ಹೊಲದಲ್ಲಿ ಬೆಳೆದು ನಿಂತ ಕಬ್ಬನ್ನು ಎಂ.ಕೆ. ಹುಬ್ಬಳ್ಳಿಯ ರಾಣಿ ಶುಗರ್ಸ್‌ನವರು ತೆಗೆದುಕೊಂಡು ಹೋಗುವ ಕೃಪೆ ತೋರಲಿಲ್ಲ. ಹಾಗೂ ಹೀಗೂ... ಕಬ್ಬು ಕಟಾವು ಮಾಡಲು ಫರ್ಮಿಟ್ ಲಭಿಸಿತ್ತು. ಕಟಾವಾಗಿ ವಾರ ಕಳೆದರೂ ಲಾರಿ(ಟ್ರಕ್) ಹೊಲಕ್ಕೆ ಬರಲೇ ಇಲ್ಲ. ಕೊನೆಗೆ ನಮಗೆ ಹೊಲಕ್ಕೆ ಬರಲು ಆಗೋದಿಲ್ಲ. ನಿಮ್ಮ ಕಬ್ಬನ್ನೆಲ್ಲ ಮುಖ್ಯ ರಸ್ತೆಗೆ ತಂದು ಹಾಕಿ ಅಂತಾ ಕಾರ್ಖಾನೆಯವರು ಫರ್ಮಾನು ಹೊರಡಿಸಿದ್ದರು. ಇದು ನಮ್ಮದೊಂದೇ ಕಥೆಯಲ್ಲ.. ಬಹುತೇಕರ ಗೋಳು ಇದೇ ಆಗಿತ್ತು... ನಮ್ಮೂರನಿಂದ ಚಿಕ್ಕದಿನಕೊಪ್ಪ ಕ್ರಾಸ್‌ವರೆಗೂ ರಸ್ತೆಯ ಒಂದು ಬದಿಗೆ ಕಬ್ಬಿನ ರಾಶಿಗಳು(ಒಣ ಹುಲ್ಲಿನ ಬಣವೆಯಂತೆ) ಠಿಕಾಣಿ ಹೂಡಲು ಶುರು ಮಾಡಿದವು. ಹಿರೇಮುನವಳ್ಳಿಯ ವಿಜಯ ಕಮ್ಮಾರ ಎಂಬಾತ ನಮ್ಮದೇ ಜಾತಿಯವನಾಗಿದ್ದರಿಂದ ಕಡಿಮೆ ಬಾಡಿಗೆ ತಗೊಂಡಿದ್ದ... ಅವರ ಟ್ರಾೃಕ್ಟರ್ ಮೂಲಕ ಕಬ್ಬನ್ನೆಲ್ಲಾ ಹೇರಿಕೊಂಡು ನಾವೂ ರಸ್ತೆಗೆ ತಂದು ಹಾಕಿದ್ವಿ... ಆದರೆ ರಾಣಿ ಶುಗರ್ಸ್‌ನವರಿಗೆ ಕರುಣೆ ಬರಲೇ ಇಲ್ಲ. ಮಳೆಗಾಲ ಬಂದ್ರೂ ಕಬ್ಬು ಅಲ್ಲೇ ಬಿತ್ತು... ರೈತರು ಕೇಳಲು ಹೋದ್ರೆ ಮರ್ಯಾದೆ ಇಲ್ಲವಾಯಿತು. ಮಳೆಯಿಂದ ರಾಶಿಯಾಗಿ ಬಿದ್ದ ಕಬ್ಬೆಲ್ಲಾ ಹಾಳಾಗಿ ಹೋಯಿತು..ಮಳೆಗಾಲ ಮುಗಿದ ಮೇಲೆ ಅದೇ ಕಬ್ಬು ರಸ್ತೆ ಪಕ್ಕ ಬಿದ್ದಿತ್ತು. ಬಿಸಿಲಿನಿಂದ ಚೆನ್ನಾಗಿ ಒಣಗಿತ್ತು.. ಅದನ್ನೇ ತಗೊಂಡು ಬಂದು ಒಲೆಗೆ ಹಚ್ಚಿ ಬಿಟ್ಟೇವು. ಆ ವರ್ಷ ಬಹುತೇಕ ಎಲ್ಲರ ಮನೆಯಲ್ಲಿಯೂ ಕಬ್ಬು ಒಲೆಯ ಉರವಲು ಆಗಿತ್ತು. ಅದೇ ಕೊನೆ... ನಮ್ಮ ಎರಡೂ ಹೊಲದಲ್ಲಿದ್ದ ಎಲ್ಲ ಕಬ್ಬನ್ನು ಅದೇ ವಿಜಯನ ಟ್ರಾೃಕ್ಟರ್‌ನಿಂದ ಅಪ್ಪ ಕಿತ್ತು ಹಾಕಿಸಿ ಬಿಟ್ಟರು. ಆಗಿನಿಂದಲೂ ನಮ್ಮ ಹೊಲದಲ್ಲಿ ಕಬ್ಬಿಗೆ ನಿಷೇಧ ಹೇರಲಾಗಿ ಬಿಟ್ಟಿದೆ. ಕಾರಣ ಆ ಕಬ್ಬು ಕೇವಲ ಅದೊಂದು ನೋವು ಕೊಟ್ಟಿರಲಿಲ್ಲ. ಕಬ್ಬು ಬೆಳೆಯುವುದಕ್ಕಾಗಿ ಅಪ್ಪ ಮಾಡಿದ ಸಾಲಕ್ಕೆ ಕಾರ್ಖಾನೆ ಶೇರು ಸಹ ಕೈ ಬಿಟ್ಟು ಹೋಯಿತು... ಲಾಭ ಕೊಡುವ ಆಸೆ ಹುಟ್ಟಿಸುವ ಈ ಕಬ್ಬಿನ ವ್ಯಾಮೋಹದಿಂದ ಮತ್ತೊಂದು ನೋವು... ಹಲವು ಮೋಸಗಳು... ವಂಚನೆಗಳು...ರೈತನ ಸುಲಿಗೆ ಇದೆ... ರೈತನಿಗೆ ಫಾಯಿದೆಯೇ ಇಲ್ಲದ ಈ ಕಬ್ಬು ಬೆಳೆದು ರೈತ ಸಾಯೋದೆಕೇ... ಕಬ್ಬಿಗೆ ನಿಷೇಧ ಹಾಕಿ ಬೇರೆ ಬೆಳೆ ಬೆಳೆಯೋದು ವಾಸಿ...

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...