Sunday, February 14, 2010

ಬಾಳೆಕುಂದ್ರಿಯಿಂದ ಬೆಂಗಳೂರವರೆಗೆ

ಚಿತ್ರನಟ ರಮೇಶ ಅರವಿಂದ ಬೆಳಗಾವಿ ತಾಲೂಕಿನ ಬಾಳೆಕುಂದ್ರಿಯಲ್ಲಿ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆಯೇ?ಹೌದು ಸ್ವತಹ ರಮೇಶ ಅವರೇ ಈ ವಿಷಯವನ್ನು ತಿಳಿಸಿದ್ದಾರೆ. ಆದರೆ ಈಗ ತಮ್ಮ ಮಗಳ ಆಸೆಯನ್ನು ಈಡೇರಿಸುವುದಕ್ಕಾಗಿ ಬಾಳೆಕುಂದ್ರಿಯಲ್ಲಿನ ತಮ್ಮ ಪಿತ್ರಾರ್ಜಿತವಾದ ೬ ಎಕರೆ ಜಮೀನು ಮಾರಿ ಬಿಟ್ಟಿದ್ದಾರೆ. ಹೀಗಾಗಿ , ಅವರ ಕುಡುಕ ತಂದೆಯ ಕೆಂಗಣ್ಣಿಗೆ ರಮೇಶ ಗುರಿಯಾಗಿದ್ದಾರೆ. ಬೇತಾಳದಂತೆ ಬೆನ್ನತ್ತಿ ತಂದೆ ಅವರನ್ನು ನಿಂದಿಸುತ್ತಿದ್ದು, ಇದೇ ತಿಂಗಳ ೧೨ ರಿಂದ ಇವರಿಬ್ಬರ ಮಧ್ಯೆ ಏನೇನು ಆಗುತ್ತದೆ ನೋಡಬೇಕು.ಇದನ್ನು ಕೇಳಿ ಎಲ್ಲಿಯ ರಮೇಶ ಅರವಿಂದ ಎಲ್ಲಿಯ ಬಾಳೆಕುಂದ್ರಿ ಎಂದು ಹುಬ್ಬೇರಿಸಬೇಡಿ. ಏಕೆಂದರೆ ಇದು ಸತ್ಯ ಸಂಗತಿಯಲ್ಲ. ಬದಲಿಗೆ ರಮೇಶ ಅರವಿಂದ ಅಭಿಯನದ `ಕ್ರೇಜಿ ಕುಟುಂಬ' ಚಿತ್ರದ ಸನ್ನಿವೇಶವಾಗಿದ್ದು, ಈ ಚಿತ್ರ ಬೆಳಗಾವಿ ತಾಲೂಕಿನ ಬಾಳೆಕುಂದ್ರಿಯಿಂದ ಆರಂಭವಾಗಿ ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳುತ್ತದೆ.ಬೆಳಗಾವಿಯಿಂದ ೮ ಕಿ.ಮೀ. ದೂರದಲ್ಲಿರುವ ಬಾಳೆಕುಂದ್ರಿ ಪಂತ ಮಹಾರಾಜರ ಮಹಿಮೆಯಿಂದಾಗಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದವರೆಗೆ ಪರಿಚಯವಿದೆ. ಇಂತಹ ಗ್ರಾಮದಲ್ಲಿ ಕುಡಕ ತಂದೆ(ಅನಂತನಾಗ)ಯ ಪುತ್ರ ಶಂಕರ (ರಮೇಶ) ಆರಂಭದಲ್ಲಿ ಮೆಕ್ಯಾನಿಕಲ್ ಕೆಲಸ ಮಾಡಿಕೊಂಡಿರುತ್ತಾನೆ. ಈ ಗ್ರಾಮ ಬೆಳಗಾವಿ-ರಾಯಚೂರ ರಾಜ್ಯ ಹೆದ್ದಾರಿ ಆಗಿದ್ದರಿಂದ ಇಲ್ಲಿ ವಾಹನಗಳ ಓಡಾಟ ಜಾಸ್ತಿ. ಹೀಗಾಗಿ ಇಲ್ಲಿ ಮೆಕ್ಯಾನಿಕಲ್ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಶಂಕರನಿಗೆ ಅನೇಕ ಆಸೆಗಳಿರುತ್ತವೆ. ಇಂತಹುದರಲ್ಲಿ ಶಂಕರನ ಮಗಳು ಧನ್ಯಳಿಗೆ ಟಿವಿಯಲ್ಲಿನ ರಿಯಾಲಿಟಿ ಷೋದಲ್ಲಿ ಸ್ಪರ್ಧಿಸಬೇಕು ಎನ್ನುವ ಆಸೆ. ಹೀಗಾಗಿ ತನ್ನ ಮಗಳ ಆಸೆಯನ್ನು ಈಡೇರಿಸುವುದಕ್ಕಾಗಿ ಕುಟುಂಬ ಸಮೇತ ಬಾಳೆಕುಂದ್ರಿಯಿಂದ ಟಂ ಟಂ ವಾಹನದಲ್ಲಿ ಊರು ಬಿಡುವ ಶಂಕರನ ಇದಕ್ಕಾಗಿ ತನ್ನ ೬ ಎಕರೆ ಜಮೀನು ಮಾರುತ್ತಾನೆ.ಈಡೀ ಕುಟುಂಬದಲ್ಲಿನ ಸದಸ್ಯರಲ್ಲಿಯೂ ಒಂದೊಂದು ಆಸೆಗಳಿರುತ್ತವೆ. ಹೀಗಾಗಿ ಎಲ್ಲರ ಆಸೆಗಳು ಕೊನೆಗೆ ಈಡೇರುತ್ತವೆ? ಎನ್ನುವುದೇ ಚಿತ್ರದ ಕ್ಲೈಮಾಕ್ಸ್.ಇತ್ತೀಚೆಗಷ್ಟೇ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಕೋಟೆಯ ದೇಸಾಯಿ ವಾಡೆಯ ಕಥೆ ಹಾಗೂ ಅಲ್ಲಿಯೇ ಚಿತ್ರೀಕರಣಗೊಂಡಿರುವ `ಸೂರ್ಯಕಾಂತಿ' ಚಿತ್ರ ರಾಜ್ಯಾದಂತ ಬಿಡುಗಡೆಗೊಂಡಿರುವ ಸಂದರ್ಭದಲ್ಲಿಯೇ ಈಗ ಗಡಿ ಜಿಲ್ಲೆ ಬೆಳಗಾವಿ ತಾಲೂಕಿನ ಪುಟ್ಟ ಗ್ರಾಮ ಬಾಳೆಕುಂದ್ರಿ `ಕ್ರೇಜಿ ಕುಟುಂಬ'ದ ಮೂಲಕ ರಾಜ್ಯದ ಮನೆಮಾತಾಗಲಿದೆ.ಬೆಳಗಾವಿಯಲ್ಲಿ ಮರಾಠಿಗರ ವಿರುದ್ಧ ಹೋರಾಡಿ ಬೆಳಗಾವಿಯ ಮನೆ ಮಗಳಾಗಿದ್ದ ದಿವಂಗತ ಚಿಂದೋಡಿ ಲೀಲಾರ ಕುಟುಂಬದ ಚಿಂದೋಡಿ ವಿಜಯಕುಮಾರ ಹಾಗೂ ಅವರ ಮೊಮ್ಮಗ ವೀರ ಈ ಚಿತ್ರದಲ್ಲಿರುವುದು ಮತ್ತೊಂದು ವಿಶೇಷ.ಅದರಲ್ಲಿಯೂ ಮರಾಠಿಯಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ `ದೇ ಧಕ್ಕಾ' ಚಿತ್ರದ ಬೆಳಗಾವಿಯಲ್ಲಿ ಉತ್ತಮ ಪ್ರದರ್ಶನಗೊಂಡಿತ್ತು. ಹೀಗಾಗಿ ಈ ಚಿತ್ರ ರಿಮೇಕ್ ಆಗಿ ಕನ್ನಡದಲ್ಲಿ ಅದೂ ಸಹ ಉತ್ತರ ಕರ್ನಾಟಕದ ಭಾಷೆಯಲ್ಲಿ ಬರುತ್ತಿರುವುದರಿಂದ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎನ್ನುತ್ತಾರೆ ನಟ ರಮೇಶ.ಬೆಳಗಾವಿಯಲ್ಲಿ ಮಂಗಳವಾರ ಕ್ರೇಜಿ ಕುಟುಂಬ ಚಿತ್ರದ ಗೆಟಪ್‌ನಲ್ಲಿಯೇ ಕಾಣಿಸಿಕೊಂಡ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಈ ಹಿಂದಿನ ಚಿತ್ರ `ರಾಮ ಭಾಮ ಶಾಮ' ಚಿತ್ರದಲ್ಲಿ ಕಮಲ ಹಾಸನ ಅವರು ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ಸಂಭಾಷಣೆ ಹೇಳಿದ್ದರು. ಇದರಿಂದಾಗಿ ನನ್ನ ಚಿತ್ರಕ್ಕೆ ಉತ್ತರ ಕರ್ನಾಟಕದ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಸಂಪೂರ್ಣ ಚಿತ್ರದ ತುಂಬಾ ಉತ್ತರ ಕರ್ನಾಟಕದ ಭಾಷೆಯನ್ನೇ ಹೊಂದಿರುವ ಈ ಚಿತ್ರ ಯಶಸ್ವಿಯಾಗಲಿದೆ ಎಂದರು.ಉತ್ತರ ಕರ್ನಾಟಕ ಭಾಷೆಯನ್ನು ಸಂತೋಷ ಎನ್ನುವ ಸಂಭಾಷಣೆಗಾರರಿಂದ ಕಲಿತುಕೊಂಡ ನಾನು ಚಿತ್ರೀಕರಣ ಆರಂಭಿಸುವುದಕ್ಕೂ ಮುಂಚೆ ಬಾಳೆಕುಂದ್ರಿ ಗ್ರಾಮವನ್ನು ನೋಡಿಕೊಂಡು ಅಲ್ಲಿಂದಲೇ ಚಿತ್ರೀಕರಣ ಆರಂಭಿಸಿದ್ದೇವೆ ಎಂದು ಹೇಳಿದರು.ರವಿ ಜೋಶಿ ನಿರ್ಮಾಣದ ಹಾಗೂ ಲವಕುಶ ಸಂಸ್ಥೆಯ ಚೊಚ್ಚಲ ಚಿತ್ರವಾದ `ಕ್ರೇಜಿ ಕುಟುಂಬ'ಕ್ಕೆ ಬಿ. ರಾಮಮೂರ್ತಿ ನಿರ್ದೇಶನ ಹಾಗೂ ಮಲ್ಲಿಕಾರ್ಜುನ ಖರ್ಗೆ ಛಾಯಾಗ್ರಹಣವಿದೆ.

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...